ಅಶ್-ಶಮ್ಸ್

ಅಪಾರ ದಯಾಳುವೂ ಅತ್ಯಂತ ಕರುಣಾಮಯಿಯೂ ಆದ ಅಲ್ಲಾಹನ ನಾಮದೊಂದಿಗೆ (ನಾನು ಓದಲಾರಂಭಿಸುತ್ತೇನೆ)!

ಸೂರ್ಯ ಮತ್ತು ಸೂರ್ಯನ ತೇಜಸ್ಸು ಸಾಕ್ಷಿ; ಚಂದಿರನು ಸಾಕ್ಷಿ – ಅದು ಸೂರ್ಯನನ್ನು ಹಿಂಬಾಲಿಸಿ ಬಂದಾಗ; ಹಗಲು ಸಾಕ್ಷಿ – ಅದು ಸೂರ್ಯನನ್ನು ಪ್ರತ್ಯಕ್ಷಗೊಳಿಸಿದಾಗ; ರಾತ್ರಿಯು ಸಾಕ್ಷಿ – ಅದು ಸೂರ್ಯನನ್ನು ಕವಿದುಕೊಂಡಾಗ! ಆಕಾಶ ಮತ್ತು ಅದರ ನಿರ್ಮಾಣ ವೈಖರಿಯು ಸಾಕ್ಷಿ; ಭೂಮಿ ಮತ್ತು ಅದು ಹಾಸಲ್ಪಟ್ಟ ರೀತಿಯು ಸಾಕ್ಷಿ! [1-6]

ಮತ್ತು ಮನುಷ್ಯನ ಆತ್ಮವನ್ನು ಹೇಗೆ (ಅದ್ಭುತ ರೀತಿಯಲ್ಲಿ) ಪರಿಪೂರ್ಣತೆಯೊಂದಿಗೆ ರೂಪಿಸಲಾಗಿದೆ (ಎಂಬುದು ನೀವು ನೋಡುವುದಿಲ್ಲವೇ?) ಅಲ್ಲಾಹ್ ನು ಮನುಷ್ಯನ ಆತ್ಮಕ್ಕೆ ಅಧರ್ಮ ಮತ್ತು ಧರ್ಮ (ಅರ್ಥಾತ್: ಕೆಡುಕು ಮತ್ತು ಒಳಿತುಗಳ ಬಗ್ಗೆ) ಸ್ವಯಂ ತಿಳಿದುಕೊಳ್ಳುವಂತಹ ಅರಿವು ಮೂಡಿಸಿದನು. ಯಾರು ತನ್ನ ಆತ್ಮವನ್ನು ಸಂಸ್ಕರಿಸಿಕೊಂಡು ಪರಿಶುದ್ಧಗೊಳಿಸಿದನೋ ಅವನು ವಿಜಯ ಸಾಧಿಸಿದನು. ಇನ್ನು ಯಾರು ಅದನ್ನು ಸಂಸ್ಕರಿಸದೆ ಅಶುದ್ಧಗೊಳಿಸಿದನೋ ಅವನು ವಾಸ್ತವದಲ್ಲಿ ಸೋಲುಂಡನು. [7-10]

ತಮ್ಮ ಉದ್ಧಟ ಸ್ವಭಾವದ ಕಾರಣ ‘ತಮೂದ್’ ಜನಾಂಗದವರು (ಪ್ರವಾದಿ ಸ್ವಾಲಿಹ್ ರವರ ಸಂದೇಶವನ್ನು) ತಿರಸ್ಕಾರದಿಂದ ತಳ್ಳಿಹಾಕಿದರು. ಅವರ ಪೈಕಿ ಅತ್ಯಂತ ಹೀನಾಯ/ದುಷ್ಟನೊಬ್ಬನು (ಎದುರು ಬೀಳುವ ಸಲುವಾಗಿ) ಎದ್ದು ನಿಂತನು. ಆ ಸಂದರ್ಭದಲ್ಲಿ ಅಲ್ಲಾಹ್ ನ ದೂತ (ಸ್ವಾಲಿಹ್ ರವರು) ‘ತಮೂದ್’ ಜನಾಂಗದವರನ್ನು ಎಚ್ಚರಿಸುವ ಸಲುವಾಗಿ ಹೇಳಿದರು – ಅಲ್ಲಾಹ್ ನ ಒಂಟೆ ಮತ್ತು ಅದರ ನೀರು ಕುಡಿಯುವ (ಸರದಿಯ ಬಗ್ಗೆ) ಎಚ್ಚರದಿಂದಿರಬೇಕು! ಆದರೆ ಅವರು (ಪ್ರವಾದಿ ಸ್ವಾಲಿಹ್ ನೀಡಿದ್ದ ಮುನ್ನೆಚ್ಚರಿಕೆಯನ್ನು) ಧಿಕ್ಕರಿಸಿದರು ಮತ್ತು ಆ ಹೆಣ್ಣೊಂಟೆಯನ್ನು ಅದರ ತೊಡೆಗಳನ್ನು ಕಡಿದು ಸಂಹರಿಸಿ ಬಿಟ್ಟರು. ಅವರೆಸಗಿದ ಆ (ಅಕ್ಷಮ್ಯ) ಪಾಪದ ಕಾರಣ ಅವರ ಒಡೆಯನು (ಅರ್ಥಾತ್: ಅಲ್ಲಾಹ್ ನು) ಅವರೆಲ್ಲರ ಮೇಲೆ ಘೋರ ಶಿಕ್ಷೆಯನ್ನೆರಗಿಸಿ ಅವರನ್ನು ನಿರ್ನಾಮ ಮಾಡಿ ಬಿಟ್ಟನು. ಶಿಕ್ಷಿಸುವಾಗ ಅಲ್ಲಾಹ್ ನು ಪರಿಣಾಮದ ಕುರಿತು ಅಂಜುವವನಲ್ಲ! [11-15]

1 thoughts on “ಅಶ್-ಶಮ್ಸ್

ನಿಮ್ಮ ಟಿಪ್ಪಣಿ ಬರೆಯಿರಿ